ಸಿಎಂ ಸಿದ್ದರಾಮಯ್ಯ ಅವರು ಪೌರಕಾರ್ಮಿಕರಿಗೆ ಸೇವಾ ಖಾಯಂ ಭಾಗ್ಯ ನೀಡಿದ್ದಾರೆ, ಪೌರಕಾರ್ಮಿಕರು ಜೀವನಪೂರ್ತಿ ಸಿದ್ದರಾಮಯ್ಯ ಅವರನ್ನು ಮರೆಯುವುದಿಲ್ಲ - ಮುತ್ಯಾಲಪ್ಪ
ಬೆಂಗಳೂರು, ಮೇ 1, 2025
ರಾಜ್ಯ ಸರ್ಕಾರವು ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಬಿಬಿಎಂಪಿ 12,692 ಪೌರಕಾರ್ಮಿಕರಿಗೆ ಸೇವಾ ಖಾಯಂ ಪತ್ರ ವಿತರಿಸಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 12,692 ಪೌರಕಾರ್ಮಿಕರಿಗೆ ಸೇವಾ ಖಾಯಂ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೆವಾಲ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿದ್ದರು.
ಕೃಷಿಕ, ಕಾರ್ಮಿಕ, ಶಿಕ್ಷಕ, ಸೈನಿಕ ಈ ದೇಶದ ಅಭಿವೃದ್ಧಿಯ ಆಧಾರಸ್ತಂಭಗಳು. ಪೌರ ಕಾರ್ಮಿಕರನ್ನು ಸ್ವಚ್ಛತಾ ರಾಯಭಾರಿಗಳಂತೆ ನಮ್ಮ ಸರ್ಕಾರ ಭಾವಿಸುತ್ತದೆ. ಪರಿಸರ ಯೋಧರಂತೆ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಬೆಂಗಳೂರು ನಗರವನ್ನು ಸುಂದರವಾಗಿಸಿದ್ದಾರೆ. ಚುನಾವಣೆ ಪೂರ್ವದಲ್ಲಿ ನಿಮ್ಮ ಬದುಕಿಗೆ ಹೊಸ ರೂಪವನ್ನು ನೀಡುತ್ತೇವೆ ಎಂದು ಪೌರಕಾರ್ಮಿಕರಿಗೆ ಮಾತು ಕೊಟ್ಟಿದ್ದೆವು. ಕೊಟ್ಟ ಮಾತಿನಂತೆ 12 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರ ಕೆಲಸ ಖಾಯಂಗೊಳಿಸಿ, ಖಾಯಂಮಾತಿ ಪತ್ರ ನೀಡುವ ಮೂಲಕ ಶ್ರಮಿಕರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಪೌರಕಾರ್ಮಿಕರ ಮಕ್ಕಳು ವಿದ್ಯಾವಂತರಾಗಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂಬುವುದು ನಮ್ಮ ಸರ್ಕಾರದ ಆಶಯ. ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಬಿಬಿಎಂಪಿ ಬಜೆಟ್ನಲ್ಲಿ 730 ಕೋಟಿ ರೂ. ಮೀಸಲಿಡಲಾಗಿದೆ. ಯಾರಿಗೂ ಒಂದು ರೂಪಾಯಿ ಲಂಚ ನೀಡದೇ ಪೌರಕಾರ್ಮಿಕರು ನೇಮಕಾತಿ ಆದೇಶ ಪತ್ರ ಪಡೆಯಬೇಕು. ನಿಮ್ಮೆಲ್ಲರಿಗೂ ನ್ಯಾಯ ಒದಗಿಸುವ ಕೆಲಸವನ್ನು ನಾನು, ನಮ್ಮ ಸರ್ಕಾರ ನಿರಂತರವಾಗಿ ಮಾಡಲಿದ್ದೇವೆ. ಪೌರ ಕಾರ್ಮಿಕರ ಬದುಕಿನಲ್ಲಿ ಬದಲಾವಣೆ ತರುವುದು ನಮ್ಮ ಸಂಕಲ್ಪ ಮತ್ತು ಬದ್ಧತೆ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು.
Comments
Post a Comment