ವಿಶೇಷ ಶಾಲಾ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾರ್ವತ್ರಿಕ ಮುಷ್ಕರ.
ಬೆಂಗಳೂರು ಜನವರಿ 29, 2026
ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ ಹಾಗೂ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ್ ಪ್ರತಿಭಟನೆಯನ್ನು ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರಾಜ್ಯದ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಯಾವುದೇ ಅನುದಾನ ದೊರಕದೆ ಇರುವ 25 ವರ್ಷ ಮೀರಿದ ವಯಸ್ಕ ಬುದ್ದಿಮಾಂದ್ಯ ಯುವಕ-ಯುವತಿಯರು ಹಾಗೂ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಸಂಘದ ಅಧ್ಯಕ್ಷ ಡಾ.ಕಾಂತಿ ಹರೀಶ್, ಒಕ್ಕೂಟದ ಅಧ್ಯಕ್ಷ ಸೋಮನಾಥ್ ಮಹಾಜನ್ ಶೆಟ್ಟರ್,ಮಾಧ್ಯಮ ಸಂಚಾಲಕ ಸಂಜಯ್ ಸಬರದ್ ಮಾತನಾಡಿ, ರಾಜ್ಯದ ಕೆಲವೊಂದು 34 ವಿಶೇಷ ಶಾಲೆಗಳಿಗೆ ಮಾತ್ರ 1982 ಅನುದಾನ ನೀತಿಯಂತೆ ಅನುದಾನ ನೀಡುತ್ತಿದೆ. ಅನುದಾನ ಇಲ್ಲದೆಯೇ ಸರಕಾರಿಯೇತರ ಸಂಸ್ಥೆಗಳು ವಿಶೇಷ ಶಾಲೆಗಳನ್ನು ನಡೆಸಿಕೊಂಡು ಬರುತ್ತಿವೆ, ರಾಜ್ಯ ಸಂಘದ ಪ್ರಬಲ ಹೋರಾಟದ ಫಲವಾಗಿ 2010-11ರಿಂದ ಅನುದಾನ ನೀಡಲು ನಿರ್ಧರಿಸಿದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನೂತನ ಅನುದಾನ ನೀತಿಯನ್ನು ಜಾರಿಗೆ ತಂದಿತ್ತು, "ಶಿಶು ಕೇಂದ್ರಿಕೃತ ಸಹಾಯಧನ ಯೋಜನೆ" ಈ ಯೋಜನೆಯಡಿಯಲ್ಲಿ ಶಿಕ್ಷಕರಿಗೆ ವೇತನವಾಗಲಿ, ಆರ್ಥಿಕ ಭದ್ರತೆಯಾಗಲೀ ಇರಲಿಲ್ಲ, ಕೇವಲ ಗೌರವಧನ ಮಾತ್ರ, 2010-11ರಲ್ಲಿ ವಿಶೇಷ ಶಿಕ್ಷಕರಿಗೆ ರೂ. 6500 ನೀಡುತ್ತಿದ್ದುದ್ದನ್ನು, 2014-15ರಲ್ಲಿ ರೂ.13,500 ಮಾಡಿದ್ದು. ಬಳಿಕ 2022ರಲ್ಲಿ ರೂ. 20,250ಕ್ಕೆ ಏರಿಸಿ ಆದೇಶ ಮಾಡಿತು. ಶಿಶುಕೇಂದ್ರಿಕೃತ ಸಹಾಯಧನ ಯೋಜನೆಯಡಿಯ ಇದೀಗ ಸುಮಾರು 166 ಶಾಲೆಗಳು ಸಹಾಯಧನ ಪಡೆಯುತ್ತಿವೆ, ಆದರೆ 1982 ಅನುದಾನ ನೀತಿಯನ್ವಯ ಅನುದಾನ ಪಡೆಯುತ್ತಿರುವ ಶಾಲೆಗಳ ವಿಶೇಷ ಶಿಕ್ಷಕರು ಸುಮಾರು 60,000/-ದಿಂದ ರೂ. 80,000/ರದವರೆಗೆ ಪಡೆಯುತ್ತಿದ್ದಾರೆ ಈ ತಾರತಮ್ಯ ಸರಿಯಲ್ಲ ಎಂದು ಹೇಳಿದರು
"ಸಮಾನ ಕೆಲಸಕ್ಕೆ ಸಮಾನ ವೇತನ" ಎಂಬ ಸಾಂವಿಧಾನಿಕ ಆಶಯದಂತೆ ಶಿಶು ಕೇಂದ್ರಿಕೃತ ಅನುದಾನ ಪಡೆಯುತ್ತಿರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ 1982 ಅನುದಾನದಡಿಯಲ್ಲಿ ಬರುವ ಸಿಬ್ಬಂದಿಗಳಿಗೆ ದೊರಕುವ ಎಲ್ಲಾ ಸೌಲಭ್ಯಗಳನ್ನು ಜಾರಿಗೊಳಿಸಬೇಕು, ರಾಜ್ಯದ ವಿಶೇಷ ಶಾಲೆಗಳ ಅನುದಾನವನ್ನು ಶೇ40%ರಷ್ಟು ಏರಿಕೆ ಮಾಡಿ ಸರಕಾರಕ್ಕೆ ನೀಡಿರುವ ಪ್ರಸ್ತಾವನೆಯನ್ನು ಈ ಕೂಡಲೇ ಮಂಜೂರು ಮಾಡಬೇಕು,ಸವೋಚ್ಚ ನ್ಯಾಯಲಯ ನೀಡಿರುವ ಆದೇಶದ ಪ್ರಕಾರ ರಾಜ್ಯದ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರಿಗೆ ಪೂರ್ಣ ಪ್ರಮಾಣದ ಆರ್ಥಿಕ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
Comments
Post a Comment