ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ : ಕಾನೂನು ಕ್ರಮ ಕೈಗೊಳ್ಳಲು ಕೆ.ಎಂ.ರಾಮಚಂದ್ರಪ್ಪ ಅಗ್ರಹ
ಬೆಂಗಳೂರು, ಜುಲೈ 1, 2026
ಇತ್ತೀಚಿಗೆ ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ವೇಳೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಪೊಲೀಸರ ಸಮ್ಮುಖದಲ್ಲೇ ಆಡಳಿತ ಪಕ್ಷದ ಶಾಸಕರಿಗೆ ಅವಮಾನಿಸಿರುವುದನ್ನು ಒಕ್ಕೂಟ ಖಂಡಿಸುತ್ತದೆ. ಶೋಷಿತ ಸಮುದಾಯಕ್ಕೆ ಸೇರಿದ ಜನ ಪ್ರತಿನಿಧಿಯ ಮೇಲೆ ದೌರ್ಜನ್ಯ ನಡೆದಿರುವಾಗ ಧ್ವನಿ ಇಲ್ಲದ ಜನರ ಪರಿಸ್ಥಿತಿ ಏನು' ಎಂದು ಪ್ರಶ್ನಿಸಿದರು. 'ರಾಜ್ಯದ ಯಾವುದೇ ಮೂಲೆಯಲ್ಲಿ ಹಿಂದುಳಿದವರ ಮೇಲೆ ದಬ್ಬಾಳಿಕೆ ನಡೆದರೆ ಒಕ್ಕೂಟವು ತೀವ್ರ ಹೋರಾಟ ನಡೆಸಲಿದೆ. ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕ್ಷಮೆಯಾಚಿಸಬೇಕು' ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾವಳ್ಳಿ ಶಂಕರ್, ಕೆ.ವೆಂಕಟಸುಬ್ಬರಾಜು, ಬಸವರಾಜ ಲ. ಬಸಲಿಗುಂದಿ, ಜಿ.ಡಿ.ಗೋಪಾಲ್, ಬಾಲಕೃಷಸ್ವಾಮಿ ಯಾದವ್, ರಂಗಪ್ಪ, ಮಹಾಂತೇಶ್ ಎಸ್. ಕೌಲಗಿ, ಬಿ.ಟಿ.ಜಗದೀಶ್, ಬಸವರಾಜ ಮಾಳಗೆ ಪಾಲ್ಗೊಂಡಿದ್ದರು.
Comments
Post a Comment